ಉತ್ತರ ಸಿಕ್ಕಿತು
**************
ಏನೂ ಬರೆಯದ
ಖಾಲಿ ಪಾಟಿಯಂತಿದ್ದ
ನನ್ನ ಮನದ ಮೇಲೆ,
ಅಂದು ಮಾಸ್ತರರು ಗೀಚಿದ
ಅಕ್ಷರಕ್ಕೆ,ಕುತೂಹಲಕ್ಕೆ
ಈಗ ಉತ್ತರ ಸಿಗುತ್ತಿದೆ.
ಎಷ್ಟು ಚೆನ್ನಾಗಿತ್ತು ಆ ಬಾಲ್ಯ.
ಜಾತಿ,ಗೋತ್ರಗಳ ಸೂತ್ರಕಂಟದೆ
ಒಂದೇ ಮನೆಯ ಮಕ್ಕಳಂತೆ
ಆಡುತ್ತಿದ್ದೆವು,ಹಾಡುತ್ತಿದ್ದೆವು;
ಮಸೀದಿ,ಮಂದಿರ,ಚರ್ಚುಗಳ
ಪ್ರಾಂಗಣಗಳಲ್ಲಿ
ಅಜ್ಞಾನವೋ..ಅಮಾಯಕತೆಯೋ
ಒಮ್ಮೆ ಮಾಸ್ತರರನು ಕೇಳಿ ಬಿಟ್ಟೆ.
'ಮುಸ್ಲಿಂ,ಕ್ರೈಸ್ತ ಎನ್ನುವುದು
ಹಿಂದೂ ಧರ್ಮದ ಉಪ ಜಾತಿಯೇ?'
ಮಾಸ್ತರರು ಉತ್ತರಿಸಲಿಲ್ಲ.
ಕಣ್ಣಾಗಿದ್ದವು ಥೇಟು ಕೆಂಡದುಂಡೆ
ಅವರ ಬೆತ್ತದೇಟಿಗೆ ನನ್ನ ಬೆನ್ನ ತುಂಬ,
ಬಾಸುಂಡೆ.
ತಪ್ಪು ನನ್ನದೋ..ಮಾಸ್ತರರದೋ
ತರ್ಕ ಮಾಡಿ ವಾದಿಸುವ ವಯಸು
ಅಂದು ನನ್ನದಾಗಿರಲಿಲ್ಲ.
ಮನೆಗೆ ಬಂದು ಅಮ್ಮನನು ಕೇಳಿದೆ.
ಅಮ್ಮನೂ ಉತ್ತರಿಸಲಿಲ್ಲ.
ಅಂದಿನಿಂದ ನನ್ನ ಪ್ರಶ್ನೆ,ಕುತೂಹಲ
ಹಾಗೆಯೇ ಉಳಿದಿತ್ತು.
ಮೊನ್ನೆ ಅದೇ ಮಾಸ್ತರರು
ಮಾತಿಗೆ ಸಿಕ್ಕಿದ್ದರು.
ಹಳೆಯ ಸಿಟ್ಟಿತ್ತಲ್ಲ,ಕಲ್ಲಿನಿಂದ
ತಲೆಗೆ ಹೊಡೆದು ಗಾಯಗೊಳಿಸಿದೆ.
ನನ್ನ ಹೆಬ್ಬೆರಳನ್ನೂ ಜೋರಾಗಿ ಕಚ್ಚಿ,
ಮಾಸ್ತರರ ರಕ್ತದಲ್ಲಿ ನನ್ನ ರಕ್ತವನ್ನೂ
ಬೆರೆಸಿ, ಕೇಳಿಬಿಟ್ಟೆ.
ಗುರುಗಳೇ,ಬೆರೆತ ಈ ರಕ್ತದಲ್ಲಿ
ನನ್ನದ್ಯಾವದು,ನಿಮ್ಮದ್ಯಾವದು?
ಮಾಸ್ತರರು ಆಗಲೂ ಉತ್ತರಿಸಲಿಲ್ಲ.
ಅವರ ಕಣ್ಣುಗಳಲ್ಲಿ ಉತ್ತರಿಸಲಾಗದ
ಪಶ್ಚಾತಾಪದ ಛಾಯೆ ಇತ್ತು.
ಗಟ್ಟಿಯಾಗಿ ನನ್ನ ತಬ್ಬಿಕೊಂಡು
ಮಗುವಿನಂತೆ ಗಳ ಗಳ ಅತ್ತರು.
ನನ್ನ ಪ್ರಶ್ನೆಗೆ,ಕುತೂಹಲಕ್ಕೆಅವರ
ಕಣ್ಣೀರೇ ಉತ್ತರ ನೀಡಿತ್ತು.
- ಗುರುನಾಥ ಬೋರಗಿ